"ತೇಜೋ-ತುಂಗಭದ್ರಾ" ಲೇಖಕ ವಸುಧೇಂದ್ರ ಬರೆದಿರುವ ಕಾದಂಬರಿಯಾಗಿದೆ. ಈ ಕಾದಂಬರಿಯು ವಿಜಯನಗರ ಸಾಮ್ರಾಜ್ಯ, ಪೋರ್ಚುಗೀಸ್‌, ಬಹುಮನಿ ಸುಲ್ತಾನರ ಕಾಲದ ಇತಿಹಾಸ ಹಾಗೂ ಆ ಕಾಲದ ಜನಜೀವನವನ್ನು ಕಟ್ಟಿಕೊಡುವ ಸಾಮಾಜಿಕ ಕಾದಂಬರಿಯಾಗಿದೆ. ೧೫-೧೬ನೇ ಶತಮಾನದ ಸಾಮಾನ್ಯರ ಹಾಗೂ ರಾಜ್ಯಾಡಳಿತವನ್ನು ಚಿತ್ರಿಸಿರುವ ಕೃತಿ ಇದಾಗಿದೆ.ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡ ಮಾಡುವ ೨೦೧೯ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ. == ಪುಸ್ತಕದ ವಿವರಣೆ == ತೇಜೋ-ತುಂಗಭದ್ರಾ ಕಾದಂಬರಿಯ ಮೊದಲ ಮುದ್ರಣ ಛಂದ ಪುಸ್ತಕ, ಪ್ರಕಾಶನ ಸಂಸ್ಥೆಯ ಮೂಲಕ ೨೦೧೯ರಲ್ಲಿ ಪ್ರಕಟವಾಯಿತು. ೪೬೪ ಪುಟಗಳ ಈ ಕಾದಂಬರಿಯ ಮೊದಲ ಮುದ್ರಣದ ಪ್ರತಿಗಳಿಗೆ ಭಾರತದಲ್ಲಿ ₹೩೮೦/- ಬೆಲೆ ನಿಗದಿ ಪಡಿಸಲಾಗಿದೆ. ಪುಸ್ತಕದ ಮುಖಪುಟ ವಿನ್ಯಾಸ ಸೌಮ್ಯ ಕಲ್ಯಾಣ್‍ಕರ್ ಅವರದು. ೧/೮ ಡೆಮಿ ಅಳತೆಯ ಈ ಪುಸ್ತಕಕ್ಕೆ ಎನ್.ಎಸ್.‌ ಮ್ಯಾಪ್‌ಲಿಥೋ ೭೦ ಜಿ.ಎಸ್.ಎಮ್. ಕಾಗದವನ್ನು ಬಳಸಲಾಗಿದೆ.( 978-93-84908-54-6). == ಕಥಾವಸ್ತು == ಈ ಕಾದಂಬರಿಯ ಕಥಾವಸ್ತುವನ್ನು ೧೫-೧೬ ನೆಯ ಶತಮಾನದ ಲಿಸ್ಬನ್, ವಿಜಯನಗರ ಮತ್ತು ಗೋವಾ ನಗರಗಳ ಸಾಮಾಜಿಕ ಜೀವನದ ಅಧ್ಯಯನದ ಮೇಲೆ ಆಧರಿಸಿ ಹೆಣೆಯಲಾಗಿದೆ. ಪೋರ್ಚುಗಲ್ ದೇಶದಲ್ಲಿ ಹರಿಯುವ ಟೈಗ್ರಿಸ್ ಅಥವಾ ತೇಜೋ ನದಿ ದಡದಲ್ಲಿ ಬೆಳೆದ ಗೇಬ್ರಿಯಲ್ ಭಾರತಕ್ಕೆ ಪ್ರಯಾಣಿಸಿ ತುಂಗಭದ್ರಾ ನದಿ ತೀರದ ಜನರ ಸಂಪರ್ಕಕ್ಕೆ ಬರುವ ಕಥೆ ಇದು.ಕಾದಂಬರಿಯ ಕಥೆ ಸುಮಾರು ಕ್ರಿ ಶ ೧೪೯೨ ರಿಂದ ಆರಂಭವಾಗಿ ೧೫೧೮ರ ವರೆಗೆ ಮುಂದುವರಿಯುತ್ತದೆ. ಈ ಕಾದಂಬರಿಯಲ್ಲಿ ಐತಿಹಾಸಿಕ ವ್ಯಕ್ತಿಗಳಾದ ಪೋರ್ಚುಗಲ್ ರಾಜ ಇಮಾನ್ಯುಲ್, ಸ್ಪೇನ್ ರಾಣಿ ಇಸಾಬೆಲ್ಲಾ, ವಾಸ್ಕೊ ಡ ಗಾಮ, ಆಲ್ಫಾನ್ಸೋ ಡಿ ಅಲ್ಬುಕರ್ಕ್, ಕೃಷ್ಣದೇವರಾಯ, ಪುರಂದರದಾಸ ಮುಂತಾದವರು ಪಾತ್ರಗಳಾಗಿದ್ದಾರೆ. ಈ ಎಲ್ಲಾ ಪಾತ್ರಗಳೊಂದಿಗೆ ಒಂದಷ್ಟು ಕಾಲ್ಪನಿಕ ಪಾತ್ರಗಳು ಸೇರಿ ಪ್ರಸ್ತುತ ಕಾದಂಬರಿಯು ರೂಪಿಸಲ್ಟಟ್ಟಿದೆ. ಚಾರಿತ್ರಿಕ ಘಟನೆಗಳಾದ ವಾಸ್ಕೊ ಡ ಗಾಮನ ಭಾರತಕ್ಕೆ ಸಮುದ್ರ ಮಾರ್ಗದ ಆವಿಷ್ಕಾರ, ಸ್ಪೇನ್ನಿಂದ ಯೆಹೂದಿ ಸಮುದಾಯ ಹೊರದಬ್ಬಲ್ಪಟ್ಟು ಪೋರ್ಚುಗಲ್ನಲ್ಲಿ ಆಶ್ರಯ ಪಡೆಯುವುದು, ಕ್ರೈಸ್ತ ಧರ್ಮಕ್ಕೆ ಅವರ ಬಲವಂತದ ಮತಾಂತರ , ೧೫೦೬ ರ ಯೆಹೂದಿ ಕ್ರೈಸ್ತರ ನರಮೇಧ , ಕೃಷ್ಣದೇವರಾಯನ ಕಳಿಂಗ ವಿಜಯ ಇತ್ಯಾದಿ ಘಟನೆಗಳ ಹಿನ್ನೆಲೆಯಲ್ಲಿ ಈ ಕಾದಂಬರಿ ಸಾಗುತ್ತದೆ. ತೇಜೋ ನದಿಯ ದಡದಲ್ಲಿರುವ ಲಿಸ್ಬೇನ್‌ ನಲ್ಲಿ ನಡೆಯುವ, ಕ್ರೈಸ್ತ ಮತಾವಲಂಬಿ ಯುವಕ ಗೇಬ್ರಿಯಲ್ ಹಾಗೂ ಯಹೂದಿ ಹುಡುಗಿ ಬೆಲ್ಲಾಳ ಪ್ರೇಮ ಕತೆಯೊಂದಿಗೆ ಈ ಕತೆ ತೆರೆದುಕೊಳ್ಳುತ್ತದೆ. ಆ ಸಮಯದಲ್ಲಿ ಪಶ್ಚಿಮದ ದೇಶಗಳಲ್ಲಿ ಪೂರ್ವದ ಭಾರತದ ಸಾಂಬರ ಪದಾರ್ಥಗಳಿಗೆ ವಿಶೇಷ ಬೇಡಿಯಿರುತ್ತದೆ. ಈ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಭಾರತಕ್ಕೆ ಸಮುದ್ರದ ಹಾದಿಯನ್ನು ಆವಿಷ್ಕರಿಸಿದ ಪೋರ್ಚುಗಲ್ ಮುಂಚೂಣಿಯಲ್ಲಿದ್ದು, ಈ ವ್ಯವಹಾರದಲ್ಲಿ ಸಾಕಷ್ಟು ಶ್ರೀಮಂತವಾಗಿರುತ್ತದೆ. ಲಿಸ್ಬೆನ್‌ ನಗರದ ಯುವಕರು ಇಂಥಹ ವ್ಯಾಪಾರಿ ಹಡುಗಗಳಲ್ಲಿ ನಾವಿಕರಾಗಿ ತೆರಳಿ ಧನವಂತರಾಗಿರುತ್ತಾರೆ. ಗೇಬ್ರಿಯಲ್‌ ಕೂಡ ಹಣ ಸಂಪಾದನೆಯ ಉದ್ದೇಶದಿಂದ ಇಂಥಹ ಒಂದು ಹಡಗಿಗೆ ನಾವಿಕನಾಗಿ ಸೇರಿಕೊಳ್ಳುವನು. ಒಂದಷ್ಟು ಹಣ ಸಂಪಾದಿಸಿ ಮರಳಿ ಬಂದು ಮದುವೆಯಾಗುವುದಾಗಿ ಪ್ರೇಯಸಿ ಬೆಲ್ಲಾಳಿಗೆ ಮಾತು ಕೊಟ್ಟು ಭಾರದತ್ತ ಹೊರಡುತ್ತಾನೆ. ಈ ಕತೆಯು ತೇಜೋ ನದಿಯ ದಡದಲ್ಲಿ ನಡೆಯುತ್ತಿದ್ದರೆ ಅತ್ತ ಭಾರತದ ವಿಜಯನಗರ ಸಾಮ್ರಾಜ್ಯದ ತುಂಗಾಭದ್ರಾ ನದಿಯ ತೀರದಲ್ಲಿರುವ ತೆಂಬಕಪುರದಲ್ಲಿ ಮಾಪಳ ನಾಯಕ, ತೆಂಬಕ್ಕ, ಹಂಪಮ್ಮ, ಕೇಶವ ಮುಂತಾದವರ ಕತೆ ಸಾಗುತ್ತಿರುತ್ತದೆ. ಹೀಗೆ ಪ್ರತ್ಯೇಕ ಭೌಗೋಳಿಕ ಭಾಗಗಳಲ್ಲಿ ಸಮಾನಾಂತರವಾಗಿ ಘಟನೆಗಳನ್ನು ನಿರೂಪಿಸುವ ಮೂಲಕ ಮುಂದುವರೆಯುತ್ತದೆ. ಭಾರತಕ್ಕೆ ಬಂದ ಗೇಬ್ರಿಯಲ್ ಅನಿವಾರ್ಯವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿತನಾಗಿ ಅಹಮದಕಣ್ಣನಾಗಿ ಬದುಕು ಸವೆಸಬೇಕಾಗುತ್ತದೆ. ಹಲವಾರು ಐತಿಹಾಸಿಕ ಘಟನೆಗಳೊಂದಿಗೆ ಕಲ್ಪನೆಗಳ ಮಿಶ್ರಣ ಈ ಕಾದಂಬರಿಯಲ್ಲಿ ಕಂಡುಬರುತ್ತದೆ. ಆ ಸಮಯದ ರಾಜಕೀಯ ಸ್ಥಿತ್ಯಂತರಗಳ ಜೊತೆಗೆ ಸಾಮಾಜಿಕ ಪರಿಸ್ಥಿತಿಗಳು, ಸಾಂಸ್ಕೃತಿಕ ಆಚರಣೆಗಳೊಂದಿಗೆ ಸತಿ ಪದ್ದತಿ, ಲೆಂಕ ಮುಂತಾದ ಧಾರ್ಮಿಕ ಆಚರಣೆಗಳನ್ನು ಕತೆಗೆ ಪೂರಕವಾಗಿ ಬಳಸಲಾಗಿದೆ. == ಪ್ರಶಸ್ತಿ ಹಾಗೂ ಮಾನ್ಯತೆಗಳು == ೨೦೧೯ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯತ್ತುಮ ಕೃತಿ ಪ್ರಶಸ್ತಿ ಯೊಂದಿಗೆ, ೨೦೨೦ರ ಸಾಲಿನ ಚಡಗ ಕಾದಂಬರಿ ಪ್ರಶಸ್ತಿ "ತೇಜೋ-ತುಂಗಭದ್ರಾ ಕಾದಂಬರಿಗೆ ದೊರಕಿದೆ..ಈ ಕಾದಂಬರಿಯ ಏಳನೆಯ ಮುದ್ರಣ ೨೦೨೦ರಲ್ಲಿ ಪ್ರಕಟಗೊಂಡಿತು. == ಉಲ್ಲೇಖಗಳು ==